ತುಮಕೂರು : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬೆಂಗಳೂರಿನಲ್ಲಿ ನೆರವೇರಿದ್ದು ತುಮಕೂರು ನಗರದಲ್ಲಿಯೂ ಡಿಕೆ ಪಟ್ಟಾಭಿಷೇಕಕ್ಕೆ ಅದ್ದೂರಿ ಸಂಭ್ರಮಾಚರಣೆ ನಡೆಯಿತು. ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಅಧ್ಯಕ್ಷತೆಯಲ್ಲಿ ತುಮಕೂರಿನ ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿ ಡಿ ಕೆ ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭವನ್ನು ಕಣ್ತುಂಬಿಕೊಂಡರು.

ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಸೇರಿದಂತೆ ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಪ್ರಮಾಣ ವಚನ ಸಮಾರಂಭದ ದೃಶ್ಯವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿ ಡಿ ಕೆ ಶಿವಕುಮಾರ್ ಸಿ ಎಂ ಆಗಿರುವುದು ನಾವೇ ಸಿಎಂ ಆದಂತೆ, ಗ್ರಾಮಾಂತರ ಕ್ಷೇತ್ರವನ್ನು ಇನ್ನೂ ಹೆಚ್ಚು ಅಭಿವೃದ್ದಿ ಪಡಿಸಲು ಶಕ್ತಿ ಬಂದಿದೆ,ಡಿಕೆಶಿ ಅವರ ನಾಯಕತ್ವ ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ, ಮುಂದಿನ ದಿನಗಳಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ 50000 ಜನ ಸೇರಿಸಿ ಮುಖ್ಯಮಂತ್ರಿಗಳನ್ನು ಕರೆಸಿ ಬೃಹತ್ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.

ಇದೆ ವೇಳೆ ಸಾವಿರಾರು ಜನರಿಗೆ ಊಟದ ವ್ಯವಸ್ತೆ ಆಯೋಜಿಸಲಾಗಿತ್ತು,ಸಿಹಿ ಹಂಚಲಾಯಿತು. ಈ ವೇಳೆ ಗ್ರಾಮಾಂತರ ಕಾಂಗ್ರೆಸ್ ಮುಖಂಡರಾದ ಪಾಲನೇತ್ರಯ್ಯ, ಸುವರ್ಣಗಿರಿ ಕುಮಾರ್, ಇಕ್ಬಾಲ್ ಅಹಮದ್, ನರಸಾಪುರ ಹರೀಶ್, ಬೋವಿಪಾಳ್ಯ ಉಮೇಶ್, ಹಾಲನೂರು ಅನಂತಕುಮಾರ್, ನರುಗನಹಳ್ಳಿ ವಿಜಿಕುಮಾರ್, ಹರಳೂರು ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
