ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಮುಹೂರ್ತ ಹೇಗಿದೆ? ಇಲ್ಲಿದೆ ವಿಶ್ಲೇಷಣೆ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿ ಆಗಿದೆ. ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಮಧ್ಯೆ ಮುಹೂರ್ತ ಎಂದು ತೀರ್ಮಾನ ಮಾಡಲಾಗಿದೆ. ಆ ದಿನದ ಮುಹೂರ್ತ ಹೇಗಿದೆ ಎಂಬುದರ ವಿಶ್ಲೇಷಣೆಯೇ ಈ ಲೇಖನ. ಯಾವುದೇ ಮುಹೂರ್ತಕ್ಕೆ ವಿಶಿಷ್ಟ ಶಕ್ತಿ ಇರುತ್ತದೆ. ಅದೇ ಮುಹೂರ್ತ ಆಗಬೇಕು ಎಂಬುದು ಸಹ ಆ ಭಗವಂತನ ನಿರ್ಣಯ ಉದ್ಘಾಟನೆಗೆ ದಿನಾಂಕ ನಿಗದಿ ಆಗಿದೆ. ಆ ಬಗ್ಗೆ ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ. ಇದೇ ಜನವರಿ 22ನೇ ತಾರೀಕು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಮಧ್ಯೆ ಮುಹೂರ್ತ ಎಂದು ತೀರ್ಮಾನ ಮಾಡಲಾಗಿದೆ. ಆ ದಿನದ ಮುಹೂರ್ತ ಹೇಗಿದೆ ಎಂಬುದರ ವಿಶ್ಲೇಷಣೆಯೇ ಈ ಲೇಖನ. ಯಾವುದೇ ಮುಹೂರ್ತಕ್ಕೆ ವಿಶಿಷ್ಟ ಶಕ್ತಿ ಇರುತ್ತದೆ. ಅದೇ ಮುಹೂರ್ತ ಆಗಬೇಕು ಎಂಬುದು ಸಹ ಆ ಭಗವಂತನ ನಿರ್ಣಯ. ಅದನ್ನು ನಿಗದಿ ಮಾಡಿದೆವು ಎಂಬುದಕ್ಕೆ ಮನುಷ್ಯರು ನಿಮಿತ್ತ ಮಾತ್ರ ಹಾಗೂ ಇದಕ್ಕೆ ಪ್ರೇರಣೆ ಆ ಭಗವಂತನೇ ಆಗಿರುತ್ತಾನೆ. ಈಗ ಸಹ ಮುಹೂರ್ತದ ವಿಶ್ಲೇಷಣೆ ಮಾಡಬೇಕು ಎಂಬುದಕ್ಕೆ ನಾನು ನಿಮಿತ್ತ ಮಾತ್ರ. ಮತ್ತು ಪ್ರೇರಣೆ ಆ ಶ್ರೀರಾಮನೇ.

ಹಾಗೆ ನೋಡಿದರೆ ದಿನದ ಪ್ರತೀ ಕ್ಷಣವೂ ಸಾಧಕವೂ ಹೌದು, ಭಾಧಕವೂ ಹೌದು. ಒಬ್ಬ ಆರೋಗ್ಯವಂತ ಮನುಷ್ಯ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಆತನ ದೇಹದಲ್ಲಿ ಒಂದಲ್ಲ ಒಂದು ಕೊರತೆ ಖಂಡಿತಾ ಕಂಡುಬರುತ್ತದೆ ಅಲ್ಲವೆ? ಒಂದು ನಗರದಲ್ಲಿ ಒಂದೆಡೆ ಪೋಲೀಸ್ ಠಾಣೆ, ಇನ್ನೊಂದೆಡೆ ದೇವಸ್ಥಾನ, ಮತ್ತೊಂದೆಡೆ ಆಸ್ಪತ್ರೆ ಇದ್ದೇ ಇರುತ್ತದೆ. ದೇವಸ್ಥಾನ ಇದ್ದರೆ ಪಾಪ ಬರಲಾರದು ಎಂಬುದಿದೆಯೇ? ಪೊಲೀಸ್ ಠಾಣೆ ಇದ್ದರೆ ಕಳ್ಳಕಾಕರು ಬರಲಾರದು ಎಂಬುದಿದೆಯೆ? ಇನ್ನು ಆಸ್ಪತ್ರೆ ಇದ್ದ ಮಾತ್ರಕ್ಕೆ ರೋಗ ಬಾರದೆ ಇರುತ್ತದೆಯೇ? ಹಾಗೆಯೇ ನಾವು ಎಂಥ ಶುಭ ಸುಮುಹೂರ್ತದಲ್ಲಿ ಕಾರ್ಯಗಳನ್ನು ಮಾಡಿದರೂ ಅದರದೇ ಆದ ಮಿತಿ ಹಾಗೂ ಅನುಕೂಲಗಳು ಇದ್ದೇ ಇರುತ್ತವೆ.

 

 

 

 

ಅಭಿಜಿನ್ ಮುಹೂರ್ತ:

ಇದೀಗ ಅಯೋಧ್ಯಾ ರಾಮ ಮಂದಿರದ ಮುಹೂರ್ತದ ವಿಚಾರಕ್ಕೆ ಬರೋಣ. ಆರಂಭದಲ್ಲೇ ಹೇಳಿದ ದಿನಾಂಕ, ಸಮಯಕ್ಕೆ ಅಭಿಜಿನ್ ಮುಹೂರ್ತ ಬರುತ್ತದೆ. ಆ ಸಮಯಕ್ಕೆ ಶ್ರೀರಾಮಚಂದ್ರನ ಭವ್ಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದು ಶುಭ ಮುಹೂರ್ತವೇ ಆಗಿದೆ. ಆದರೆ ಭಾಧಕಗಳಿಲ್ಲ ಎನ್ನುವಂತಿಲ್ಲ. ಉದಾಹರಣೆಗೆ ಹೇಳಬೇಕು ಅಂದರೆ, ತ್ರೇತಾಯುಗದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಮುಹೂರ್ತ ಇಟ್ಟಿದ್ದು ಅಂದಿನ ಬೃಹಸ್ಪತಿಗಳು. ಆದರೆ ಆ ಮುಹೂರ್ತದ ಪರಿಣಾಮ ಏನಾಯಿತು? ರಾಮನ ವನವಾಸ, ಸೀತಾಪಹರಣ ಆಯಿತಲ್ಲವೇ ಎಂದು ಹೇಳಬಹುದು. ಆದರೆ ದುಷ್ಟ ಸಂಹಾರ ಆಯಿತಲ್ಲವಾ? ರಾವಣಾದಿ ದುಷ್ಟರು, ಹದಿನಾಲ್ಕು ಸಾವಿರ ಖರದೂಷಣರು ಸಾಯಲಿಲ್ಲವೇ? ರಾಮ ವನವಾಸಕ್ಕೆ ಹೋಗದಿದ್ದರೆ ಇದೆಲ್ಲ ನಡೆಯುತ್ತಿತ್ತೇ? ಇದಕ್ಕೇ ಹೇಳುವುದು ದೈವ ನಿಯಮ.

 

 

 

 

ಮುಹೂರ್ತ ವಿಶ್ಲೇಷಣೆ:

ಜನವರಿ ಇಪ್ಪತ್ತೆರಡರಂದು ಮೇಷ ಲಗ್ನ. ಮತ್ತು ಆ ಲಗ್ನದಲ್ಲಿ ಗುರು. ಪಂಚಮ ಬಿಂಬಸ್ಥಾನ ಶುದ್ಧ. ಪಂಚಮದ ಬಾಧಾಧಿಪತಿ ಕುಜನು. ಶುಕ್ರ- ಅಂಗಾರಕ, ಬುಧ- ಅಂಗಾರಕಯುಕ್ತನಾಗಿ ಅಗ್ನಿತತ್ವ ರಾಶಿಯಲ್ಲಿ (ಧನು ರಾಶಿಯಲ್ಲಿ) ಯುದ್ಧ ಸ್ಥಿತಿಯಲ್ಲಿ ಇದೆ. ಅದರಲ್ಲೂ ಲಗ್ನಾಧಿಪ ಕುಜನೇ ಯುದ್ಧ ಸ್ಥಿತಿಯಲ್ಲಿ! ಇಲ್ಲಿ ಲಗ್ನಾಧಿಪನು ಅಯೋಧ್ಯಾಧಿಪತಿ ಕೋದಂಡ ರಾಮ. ಇರುವುದೂ ಕೋದಂಡ ಧನುಸ್ಸು ರಾಶಿಯಲ್ಲಿ. ಲಗ್ನದ ಬಾಧಾಧಿಪತಿ ಶನಿಯು ತೃತೀಯ ವೀಕ್ಷಣೆಯಲ್ಲೇ ಲಗ್ನ ಇರೋದು (ಶನಿಯು ಕುಂಭ ರಾಶಿಯಲ್ಲಿದ್ದು, ಶನಿಗೆ ಮೂರು, ಏಳು ಹಾಗೂ ಹತ್ತನೇ ದೃಷ್ಟಿ ಇದೆ. ಹಾಗೆ ಕುಂಭದಲ್ಲಿ ಇರುವ ಶನಿ ಅಲ್ಲಿಂದ ಮೂರನೇ ಮನೆ ಮೇಷವನ್ನು ವೀಕ್ಷಣೆ ಮಾಡುತ್ತಿದ್ದಾನೆ).

ಇನ್ನು ಈ ಕಾರ್ಯಕ್ರಮ ನಿಗದಿ ಆಗಿರುವ ದಿನದಂದು ಇರುವುದು ಲಗ್ನಾಧಿಪತಿಯಾದ ಕುಜನ ನಕ್ಷತ್ರವಾದ ಮೃಗಶಿರಾ. ಷಷ್ಠಾಧಿಪತಿಯೊಂದಿಗೆ (ಆರನೇ ಮನೆ ಕನ್ಯಾ ರಾಶಿ ಆಗುತ್ತದೆ. ಕನ್ಯಾ ರಾಶಿಯ ಅಧಿಪತಿ ಬುಧ) ಲಗ್ನಾಧಿಪತಿಯ (ಮೇಷ ರಾಶಿಯ ಅಧಿಪತಿ ಕುಜ ಗ್ರಹ) ಯುತಿಯಾಗಿದೆ. ಇದು ಗ್ರಹ ಯುದ್ಧ. ಇನ್ನು ಲಗ್ನ ಷಷ್ಠದಲ್ಲೇ (ಆರನೇ ಮನೆ ಕನ್ಯಾ ರಾಶಿ) ಕೇತು ಉದಯ. ಇಂಥ ಗ್ರಹಸ್ಥಿತಿ ಇರುವುದರಿಂದ ಆಗುವ ಪರಿಣಾಮ ಏನು ಅಂತ ನೋಡೋಣ.

 

 

 

ಮಹಾ ಪರಿವರ್ತನೆ:

ಪಂಚಮಾಧಿಪತಿ (ಸಿಂಹ) ರವಿಯು ಕರ್ಮ ಸ್ಥಾನದಲ್ಲಿ ದಿಗ್ಬಲ. ಇದು ಸಾಕು. ಬಿಂಬಕ್ಕೆ ಕಾರ್ಣಿಕ ಇದ್ದರೆ, ಬಲ ಇದ್ದರೆ ಪ್ರತಿಷ್ಠೆಗೆ ಬಲ ಬಂದಂತೆ ಆಯಿತು. ಏಕಾದಶದಲ್ಲೇ ಮೂಲ ತ್ರಿಕೋಣದಲ್ಲಿ ಶನಿ ಇರುವುದು ಮಹಾ ಬಲಿಷ್ಠತೆಯ ಸೂಚಕ. ಲಗ್ನಾಧಿಪತಿ (ಕುಜ) ಭಾಗ್ಯದಲ್ಲಿ (ಧನುಸ್ಸಿನಲ್ಲಿ) ಭಾಗ್ಯಾಧಿಪತಿ ಗುರು (ಮೇಷದಿಂದ) ವೀಕ್ಷಣೆಯಲ್ಲಿದ್ದಾನೆ. ಬುಧ- ಶುಕ್ರರ ಯುತಿ ಹರ್ಷದಾಯಕ. ಅಷ್ಟೇ ಅಲ್ಲ, ಇಲ್ಲೊಂದು ಮಹಾ ಪರಿವರ್ತನೆಯೂ ಇದೆ.

 

ಮೊದಲು ಶುಭ ಪರಿವರ್ತನೆ ನೋಡೋಣ. ಲಗ್ನಾಧಿಪತಿ (ಕುಜ) ಮತ್ತು ಭಾಗ್ಯಾಧಿಪತಿಗೆ (ಗುರು) ಖಲ ಮಹಾಯೋಗದ ಪರಿವರ್ತನೆ. ಅಂದರೆ ಮೇಷ ರಾಶ್ಯಾಧಿಪತಿಯಾದ ಕುಜನು ಧನುಸ್ಸು ರಾಶಿಯಲ್ಲಿ ಹಾಗೂ ಧನುಸ್ಸು ರಾಶ್ಯಾಧಿಪತಿಯಾದ ಗುರುವು ಮೇಷದಲ್ಲಿ ಇದ್ದು, ಇದನ್ನೇ ಪರಿವರ್ತನೆ ಯೋಗ ಎನ್ನಲಾಗುತ್ತದೆ. ಮತ್ತು ಈ ವೇಳೆ ಇದು ಶುಭ ಪರಿವರ್ತನೆ ಆಗಿದೆ. ಇನ್ನು ಅಶುಭ ಪರಿವರ್ತನೆ ನೋಡೋಣ. ವ್ಯಯಾಧಿಪತಿ ಗುರು (ಮೀನ ರಾಶಿಯ ಅಧಿಪತಿ ಸಹ ಗುರು) ಮತ್ತು ಅಷ್ಟಮಾಧಿಪತಿ (ವೃಶ್ಚಿಕ ರಾಶಿಯ ಅಧಿಪತಿ ಸಹ ಕುಜ) ಕುಜನ ಪರಿವರ್ತನೆ.

 

 

 

ಸೂರ್ಯ ಗ್ರಹಣದ ಪ್ರಭಾವ:

ಇದು ಉತ್ತಮವಲ್ಲ. ಅಂದ ಹಾಗೆ ಯಾರಿಗೆ ಉತ್ತಮವಲ್ಲ? ರಾಮ ಭಕ್ತರ ವಿರೋಧಿಗಳಿಗೆ ಖಂಡಿತಾ ಉತ್ತಮವಲ್ಲ. ಅಂದರೆ ಅಯೋಧ್ಯಾ ರಾಮ ಮಂದಿರ ಸ್ಥಾಪನೆ ವಿರೋಧಿಸುವ ಮತ್ತು ಅವರನ್ನು ಬೆಂಬಲಿಸುವವರಿಗೆ ಹಾನಿ ಆಯಾಗಬಹುದು. ಕರ್ಮಾಧಿಪತಿ (ಮಕರ ರಾಶಿಯ ಅಧಿಪತಿ) ಶನಿಯು ತನ್ನ ಪೂರ್ಣ ಕರ್ಮದೃಷ್ಟಿಯಲ್ಲಿ ಮರಣ ಸ್ಥಾನ ವೀಕ್ಷಣೆ ಮಾಡುತ್ತಿದ್ದಾನೆ. ಎರಡೆಣಿಸಿದವರಿಗೆ ಗತಿ ಕಾಣಿಸುವ ಯೋಗ ಇದು. ಇದಕ್ಕೆ ಪೂರಕವಾಗಿ ಈ ಲಗ್ನದ ಬಿಂಬಾಧಿಪತಿ (ಪಂಚಮಾಧಿಪತಿ- ಸಿಂಹ ರಾಶಿಯ ಅಧಿಪತಿ) ರವಿಗೆ ಏಪ್ರಿಲ್ ಎಂಟರಂದು ಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರ ಇಲ್ಲದಿದ್ದರೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದು ಗೋಚರಿಸಿ, ದುಷ್ಫಲ ನೀಡಲಿದೆ. ಆಗ ಶ್ರೀರಾಮ ಚಂದ್ರನ ಈ ಭರತ ಭೂಮಿಯು ಅವರಿಗೆ ಸಹಕಾರಿಯೂ ಆಗಲಿದೆ. ಅಂತೂ ಭಾರತವೇ ಇಡೀ ಜಗತ್ತಿಗೆ ವರವೂ ಆಗಲಿದೆ. ಭಾರತ ವಿಶ್ವಗುರು ಆಗುವುದನ್ನು ಈ ಮುಹೂರ್ತ ಸೂಚಿಸುತ್ತದೆ.

 

ಒಟ್ಟಿನಲ್ಲಿ ಶ್ರೀರಾಮಚಂದ್ರನು ಬಿಂಬ ರೂಪಿಯಾಗಿ ಇಡೀ ಜಗತ್ತನ್ನೇ ಜೈಸುವ ಒಂದು ಅತ್ಯುತ್ತಮ ಕಾಲದ ಪ್ರತಿಷ್ಠಾ ಮುಹೂರ್ತ ಇದಾಗಿದೆ. ಸಾವಿರ ವರ್ಷದ ದಾಸ್ಯ ಸಂಕೋಲೆಯಿಂದ ಮುಕ್ತವಾಗಲಿರುವ ಈ ಮಂದಿರದ ಶುಭಾರಂಭವು ಮರೆಯದ ದೀಪಾವಳಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

error: Content is protected !!