ತುಮಕೂರು:ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ,ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ.ಶ್ರೀವೀರೇಂದ್ರ ಹೆಗ್ಗಡೆರವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು, ಅವರುಗಳನ್ನು ತನಿಖೆಗೆ ಒಳಸಪಡಿಸಬೇಕು ಎಂದು ಆಗ್ರಹಿಸಿ ಇಂದು ವಿವಿಧ ಸಮುದಾಯಗಳ ಜನರು, ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತಾಧಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು,ರಾಜ್ಯಪಾಲರು,ಗೃಹಸಚಿವರಿಗೆ ಮನವಿ ಸಲ್ಲಿಸಿದರು.

ನಗರದ ಟೌನ್ಹಾಲ್ ವೃತ್ತದಿಂದ ಎಂ.ಜಿ.ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಸಾವಿರಾರು ಭಕ್ತಾಧಿಗಳು,ಧರ್ಮಸ್ಥಳದ ಹೆಸರಿಗೆ ಚ್ಯುತಿ ಉಂಟು ಮಾಡಲು ಯತ್ನಿಸುತ್ತಿರುವ ಎಲ್ಲಾ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಭಿತ್ತಿ ಪತ್ರ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಟೌನ್ಹಾಲ್ ಬಳಿ ಪ್ರತಿಭಟನೆ ಕುರಿತಂತೆ ಮಾತನಾಡಿದ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್,ಕಳೆದ 25-30 ವರ್ಷಗಳಿಂದಲೂ ಧರ್ಮಸ್ಥಳದ ಪರಂಪರೆಯ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ.ಧರ್ಮಸ್ಥಳದ ಹೆಸರು ಹಾಳು ಮಾಡಲು ಇನ್ನಿಲ್ಲದ ಪ್ರಯತ್ನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ.ಭಕ್ತರು ದೇವರ ಸಮಾನ ಎಂದು ಪರಿಗಣಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಬಗ್ಗೆ ಜನರಲ್ಲಿ ತಪ್ಪು ಭಾವನೆ ಬರುವಂತೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ.ತನಿಖೆಗೆ ಮುಕ್ತವಾದ ಅವಕಾಶ ನೀಡುತ್ತಿದ್ದರೂ ಸಹ ಅವರ ಮೇಲೆ ನಿರಂತರವಾಗಿ ಹುಸಿ ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ.ಹಾಗಾಗಿ ಧರ್ಮಸ್ಥಳದ ಭಕ್ತಾಧಿಗಳು ಇಂದು ಬೀದಿಗಿಳಿದು ಹೋರಾಟಕ್ಕೆ ನಿಂತಿದ್ದಾರೆ.ಸರಕಾರ ಕೂಡಲೇ ಸುಳ್ಳು ಸುದ್ದಿ ಹರಡುತ್ತಿರುವ ಜನರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಸಮಸ್ತ ಹಿಂದೂಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ.ದೇವರ ರೂಪದಲ್ಲಿರುವ ವೀರೇಂದ್ರ ಹೆಗ್ಗಡೆ ಅವರಿಗೆ ಕೆಟ್ಟ ಹೆಸರು ತರಲು ಕೆಲ ಸಮಾಜ ವಿದ್ರೋಹಿಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹವರ ವಿರುದ್ದ ನಾವೆಲ್ಲರೂ ಒಗ್ಗೂಡಿ ಹೋರಾಟ ನಡಸಬೇಕಾಗಿದೆ.ಧರ್ಮಸ್ಥಳದ ಬಗ್ಗೆ ಮಾಡುತ್ತಿರುವ ಅಪಪ್ರಚಾರ ನಿಲ್ಲಬೇಕು.ಪ್ರಕರಣದ ಕುರಿತು ತನಿಖೆ ಸರಿಯಾದ ರೀತಿಯಲ್ಲಿ ನಡೆದು, ಸತ್ಯ ಹೋರ ಬರುವ ಮೂಲಕ ಕ್ಷೇತ್ರದ ಪಾವಿತ್ರತೆಯನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಪತ್ರಕರ್ತ ಆರ್.ಕಾಮರಾಜು ಮಾತನಾಡಿ,ಇಡೀ ವಿಶ್ವದಲ್ಲಿಯೇ ಧರ್ಮಸ್ಥಳ ಎಂಬ ಹೆಸರು ಭಕ್ತಿ ಮತ್ತು ಯುಕ್ತಿಗೆ ಹೆಸರಾಗಿರುವ ಪುಣ್ಯ ಕ್ಷೇತ್ರವಾಗಿದೆ.ಶಿಸ್ತುಬದ್ದ ಆಡಳಿತ ಮತ್ತು ಭಕ್ತರಿಗೆ ಸಕಲ ಸೌಕರ್ಯಗಳನ್ನು ನೀಡಿ, ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಹೀಗಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳೂ, ಕೆಲ ಯೂಟ್ಯೂಬರ್ಸ್ ಗಳು,ಧಾರ್ಮಿಕ ಪರಂಪರೆಗೆ ಕೆಲವರು ಚ್ಯುತಿ ತರುವ ನಿಟ್ಟಿನಲ್ಲಿ ಹುನ್ನಾರ ನಡೆಸಿ, ಅಪಪ್ರಚಾರ ನಡೆಸಿ,ಭಕ್ತರ ಧಾರ್ಮಿಕ ನಂಬಿಕೆಯನ್ನು ಹೊಡೆದು ಹಾಕಲು ಪ್ರಯತ್ನಿಸಿದ್ದಾರೆ.ಸರಕಾರ ಕೂಡಲೇ ಇಂತಹ ಚುಟುವಟಿಕೆಯಲ್ಲಿ ತೊಡಗಿರುವ ಯೂಟ್ಯೂಬರ್ಸ್ ಆದ ಸಮೀರ್. ಎಂ.ಡಿ,ಗಿರೀಶ್ ಮಟ್ಟಣ್ಣನವರ್,ಮಹೇಶ್ ತಿಮ್ಮರೋಡಿ ಅವರುಗಳನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರೆ ನ್ಯಾಯ ಹೊರಬರಲಿದೆ.ಹಿಂದುಗಳ ಪವಿತ್ರ ಧಾರ್ಮಿಕ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಧಕ್ಕೆ ತರಲು ಎಂದಿಗೂ ಭಕ್ತವೃಂದ ಅವಕಾಶ ಮಾಡಿಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲ ಹೋರಾಟ ನಡೆಯಲಿದೆ ಎಂದರು.
ಧರ್ಮಸ್ಥಳ ಭಕ್ತರಲ್ಲಿ ಒಬ್ಬರಾದ ಶ್ರೀಮತಿ ವಿಜಯಭಾಸ್ಕರ್ ಮಾತನಾಡಿ,ನಾನು ಕೂಡ ಶ್ರೀಕ್ಷೇತ್ರ ಧರ್ಮಸ್ಥಳದ ಪಕ್ಕದ ಬೆಳ್ತಂಗಡಿಯವಳು, ಸುಮಾರು ಐವತ್ತು ವರ್ಷಗಳಿಂದ ಈ ಕ್ಷೇತ್ರದ ಬಗ್ಗೆ ಬಲ್ಲೆ. ಕೆಲವರು ಆರೋಪಿಸುತ್ತಿರುವಂತೆ ಯಾವುದೇ ಆಘಾತಕಾರಿ ಪ್ರಕ್ರಿಯೆಗಳು ಇಲ್ಲಿ ನಡೆದಿಲ್ಲ.ನಡೆಯುವುದಕ್ಕೆ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ಅವಕಾಶ ಮಾಡಿಕೊಟ್ಟಿಲ್ಲ. ತಿಮ್ಮರೊಡ್ಡಿ, ಮಹೇಶ್ ಮತ್ತು ಕೆಲ ಯೂಟ್ಯೂಬರ್ಸ್ ಗಳು ದುಡ್ಡು ಮಾಡುವ ಉದ್ದೇಶದಿಂದ ಈ ರೀತಿಯ ಕ್ಷೇತ್ರಕ್ಕೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಪ್ರಯತ್ನಗಳಿಗೆ ಸರಕಾರ ಕೂಡಲೇ ಕಡಿವಾಣ ಹಾಕಬೇಕು.ಸರಕಾರ ಕ್ರಮ ಕೈಗೊಳ್ಳದಿದರೆ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.

ಬೆಳ್ಳಾವೆಯ ಶ್ರೀಕಾರದ ವೀರಬಸವಸ್ವಾಮೀಜಿ ಮಾತನಾಡಿ,ಪುಣ್ಯಕ್ಷೇತ್ರಗಳ ಬಗ್ಗೆ ಮಾಡುವ ಅಪಪ್ರಚಾರವನ್ನು ನಾವೆಲ್ಲರೂ ಖಂಡಿಸಬೇಕಾಗಿದೆ. ಮಠ, ಮಾನ್ಯಗಳು ಒಂದು ಸರಕಾರಕ್ಕೆ ಪರ್ಯಾಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿವೆ.ಸರ್ಕಾರ ಮಾಡಲಾಗದ ಸಮಾಜಮುಖಿ ಕೆಲಸಗಳನ್ನು ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ,ಬಡವರಿಗೆ ಆಶಾಕಿರಣವಾಗಿದ್ದಾರೆ, ಇದನ್ನು ಸಹಿಸಲಾಗದೆ ಕೆಲವರು, ಶ್ರೀಕ್ಷೇತ್ರದ ಧರ್ಮಸ್ಥಳದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಮೂಲಕ ಸ್ವಹಿತಾಸಕ್ತಿಯ ಜನರ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಪ್ರತಿಭಟನೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು, ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿನಿಯರುಗಳು,ವಕೀಲರು,ವಿವಿಧ ಭಜನಾಮಂಡಳಿಯ ಸದಸ್ಯರುಗಳು ಪಾಲ್ಗೊಂಡಿದ್ದರು.