ತುಮಕೂರು: ಮಧುಗಿರಿ ತಾಲೂಕು ತುಮ್ಮಲು ಗ್ರಾಮ ವ್ಯಾಪ್ತಿಯಲ್ಲಿನ 40 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಭೂ ಪರಿವರ್ತನೆ ಮಾಡಿಕೊಟ್ಟು ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ದೋಚಲು ಹೊಂಚುಹಾಕಿರುವ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಾಗರೀಕ ಸನ್ಮಾನಕ್ಕೆ ಅವಕಾಶ ನೀಡದೇ ಪೊಲೀಸರು ಯಾತ್ರೆಯನ್ನು ಹತ್ತಿಕ್ಕಿದರು.

ಕೃತ್ಯದಲ್ಲಿ ಭಾಗಿಯಾದ ಡಿಸಿ, ಎಡಿಸಿ ಮತ್ತೆ ಇತರೆ ತಪ್ಪಿತಸ್ಥ ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳನ್ನು ಅಮಾನತು ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೊಳಪಡಿಸಬೇಕು ಎಂದು ಜುಲೈ 11ರವರೆಗೆ ಸರ್ಕಾರಕ್ಕೆ ಕೆಆರ್ಎಸ್ ಪಕ್ಷ ಗಡುವು ನೀಡಿತ್ತು. ಆದರೂ ಕ್ರಮ ಕೈಗೊಳ್ಳದವರ ಕಾರಣ ಕೆಆರ್ಎಸ್ ಪಕ್ಷದ ಎಲ್ಲ ಸೈನಿಕರೊಂದಿಗೆ ಟೌನ್ಹಾಲ್ ಮೂಲಕ ಡಿಸಿ ಕಚೇರಿಯವರೆಗೆ ತೆರಳಿ ಅಲ್ಲಿ, ಡಿಸಿಗೆ ಸನ್ಮಾನ ಮಾಡಲು ಯೋಜಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 10ಗಂಟೆಗೆ ಟೌನ್ಹಾಲ್ ಸೇರಿದ ಕೆಆರ್ಎಸ್ ಕಾರ್ಯಕರ್ತರು ಇನ್ನೇನು ಡಿಸಿ ಕಚೇರಿಯತ್ತ ಹೊರಡುವಾಗಲೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನೇರ ಬೆಳ್ಳಾವಿ ಠಾಣೆಗೆ ಕರೆದೊಯ್ದರು. ಸಚಿವ ಕೃಷ್ಣೇ ಬೈರೇಗೌಡ ಅವರು ಈಗಾಗಲೇ ತನಿಖೆಗೆ ಸೂಚಿಸಿರುವ ಕುರಿತು ಮತ್ತು ಸರ್ಕಾರಿ ಜಮೀನನ್ನು ಅಕ್ರಮ ಪರಭಾರೆ ಮಾಡಿದ ದಾಖಲೆಗಳನ್ನು ನೀಡಿ ಬೆಳ್ಳಾವಿ ಠಾಣೆಯಲ್ಲಿ ಕೆ ಆರ್ ಎಸ್ ಪಕ್ಷದ ಸೈನಿಕರು ಡಿಸಿ ವಿರುದ್ಧ ಪ್ರಕರಣ ದಾಖಲಿಸಿದರು.

ಗಮನ ಸೆಳೆದ ಬಾಗಿನ
40 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿದ ಡಿಸಿಗೆ ಸನ್ಮಾನ ಮಾಡಲು ಕೆಆರ್ಎಸ್ ಕಾರ್ಯಕರ್ತರು ಮೊರದಲ್ಲಿ ಅರಿಣಿ, ಕುಂಕುಮ, ಸೀರೆ, ಬಳೆ, ಮತ್ತು ತಾಂಬೂಲ ತಂದಿದ್ದು, ವಿನೂತನ ಪ್ರತಿಭಟನೆ ನೋಡುಗರ ಗಮನ ಸೆಳೆಯಿತು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಾಂಬೂಲ ವೈರಲ್ ಆಗಿದೆ.
ಕಾಯಕವೇ ಕೈಲಾಸ ದುರ್ಬಳಕೆ
ಡಿಸಿ ವಿರುದ್ಧ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೆಆರ್ಎಸ್ ಪಕ್ಷ ಅಕ್ರಮ ಭೂ ಪರಭಾರೆ ಮಾಡಿದ ಡಿಸಿಗೆ ನಾಗರಿಕ ಸನ್ಮಾನ ಎಂಬ ಪೋಸ್ಟರ್ಗೆ ಠಕ್ಕರ್ ಕೊಡುವ ರೀತಿಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಗ್ರೂಪ್ನಲ್ಲಿ ನಮ್ಮ ಡಿಸಿ ನಮ್ಮ ಹೆಮ್ಮೆ ರೀತಿಯಲ್ಲಿ ಪೋಸ್ಟರ್ ರಚಿಸಿ, ಕಾಯಕವೇ ಕೈಲಾಸದಂತೆ ಕೆಲಸ ಮಾಡುತ್ತಿದ್ಧಾರೆ ಎಂದು ಉದ್ಘೋಷ ಬರೆದು ಹಾಕಿದ್ದು, ಇದು ಬಸವಣ್ಣನ ಕಾಯಕವೇ ಕೈಲಾಸವನ್ನು ಅಣಕಿಸುವ ರೀತಿಯಲ್ಲಿ ಹೈಜಾಕ್ ಮಾಡಿದ್ದಾರೆ. ಅಕ್ರಮ ಎಸಗಿದ ಅಧಿಕಾರಿಯನ್ನೇ ಬೆಂಬಲಿಸಿದ ಎಲ್ಲರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಆರ್ಎಸ್ ಪಕ್ಷ ಆಗ್ರಹಿಸಿದೆ.
ಮಧುಗಿರಿ ತಾಲ್ಲೂಕಿನ ತುಮ್ಮಲು ಗ್ರಾಮದ ಅಮೂಲ್ಯ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದ್ದು, ತದನಂತರ ಅದನ್ನು ಭೂ ಪರಿವರ್ತನೆ ಮಾಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಭೂಮಿಯು ಸಾರ್ವಜನಿಕ ಉಪಯೋಗಕ್ಕಾಗಿ, ವಿಶೇಷವಾಗಿ ಬಡವರಿಗೆ ವಸತಿ ಯೋಜನೆಗಳಿಗಾಗಿ ಮೀಸಲಿಡಬಹುದಾದಂತಹ ಮಹತ್ವದ ಆಸ್ತಿಯಾಗಿದ್ದು, ಕೆಲವೇ ಕೆಲವು ವ್ಯಕ್ತಿಗಳ ವೈಯಕ್ತಿಕ ಲಾಭಕ್ಕಾಗಿ ಇದನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ತೀವ್ರ ಖಂಡನೀಯ ಎಂದು ಪಕ್ಷದ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ತಿಳಿಸಿದರು.
ಪಕ್ಷದ ಮಲ್ಲಿಕಾರ್ಜುನ ಭಟ್ರಹಳ್ಳಿ ಮಾತನಾಡಿ, ಪ್ರಸ್ತುತ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಪಾತ್ರದ ಬಗ್ಗೆಯೂ ಈ ಅಕ್ರಮದಲ್ಲಿ ಆರೋಪಗಳು ವ್ಯಕ್ತವಾಗಿವೆ. ಈ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಳು ನಕಲಿ ಪಹಣಿ, ಆರ್.ಟಿ.ಸಿ. ಮತ್ತು ಇತರೆ ಸುಳ್ಳು ದಾಖಲೆ ವ್ಯವಸ್ಥಿತವಾಗಿ ಸೃಷ್ಟಿಸಿರುವ ಸಾಧ್ಯತೆ ಇದೆ. ಹಿಂದಿನ ಅಕ್ರಮ ಖಾತೆ ಸಮರ್ಪಕವಾಗಿ ಪರಿಶೀಲಿಸದೆ ಹಾಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೂ ಪರಿವರ್ತನೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕಂದಾಯ ಇಲಾಖೆಯ ಉನ್ನತ ಅಧಿಕಾರಿಯಾಗಿ, ಸರ್ಕಾರಿ ಭೂಮಿಯ ರಕ್ಷಣೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಅವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಆದಾಗ್ಯೂ, ಈ ಪ್ರಕರಣದಲ್ಲಿ ಅವರ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಸಹಕಾರವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಭಾನುಪ್ರಕಾಶ್, ಮಧುಗಿರಿ ತಹಶೀಲ್ದಾರ್ ಸಿರಿನ್ ತಾಜ್ ಮತ್ತು ಐ. ಡಿ. ಹಳ್ಳಿ ಕಂದಾಯ ಅಧಿಕಾರಿ ಚಿಕ್ಕರಾಜು ಸಹ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಕೇವಲ ಒಂದು ಪ್ರತ್ಯೇಕ ಘಟನೆಯಾಗಿರದೆ, ಸರ್ಕಾರಿ ಭೂಮಿಯನ್ನು ದುರುಪಯೋಗಪಡಿಸಿಕೊಂಡು, ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ವ್ಯವಸ್ಥಿತ ಪಿತೂರಿಯ ಭಾಗವಾಗಿರುವ ಸಾಧ್ಯತೆ ಇದೆ ಎಂದು ನಮ್ಮ ಅಭಿಪ್ರಾಯವಾಗಿದೆ. ಇಂತಹ ಅಕ್ರಮಗಳು ಸರ್ಕಾರದ ಆಡಳಿತದ ಮೇಲೆ ಸಾರ್ವಜನಿಕರಿಗಿರುವ ವಿಶ್ವಾಸವನ್ನು ಸಂಪೂರ್ಣವಾಗಿ ನಾಶಪಡಿಸುವುದಲ್ಲದೆ, ಭ್ರಷ್ಟಾಚಾರಕ್ಕೆ ಪ್ರಮುಖ ದಾರಿ ಮಾಡಿಕೊಡುತ್ತವೆ ಎಂದರು.

ವರ್ಗಾವಣೆಯಾದರೆ ಯಾರು ಹೊಣೆ?
ಅಧಿಕಾರಿಗಳು ಜಿಲ್ಲೆಗೆ ಬಂದು ಸೇವೆ ಮಾಡಬೇಕಿತ್ತು ಆದರೆ, ಅಕ್ರಮ ಮಾಡಿ ಬೇರೆ ಕಡೆ ಹೋದರೆ ಇಲ್ಲಿನ ಭ್ರಷ್ಟಾಚಾರಕ್ಕೆ ಯಾರು ಹೊಣೆ ಎಂದು ಜ್ಞಾನಸಿಂಧುಸ್ವಾಮಿ ಪ್ರಶ್ನಿಸಿದರು. ಅಧಿಕಾರಿಗಳು ವರ್ಗಾವಣೆಯಾಗುತ್ತಲೇ ಇರುತ್ತಾರೆ ಆದ್ರೆ, ಇಲ್ಲಿನ ಅಕ್ರಮ ಭೂ ಪರಭಾರೆಗೆ ತಕ್ಕ ಶಿಕ್ಷೆಯಾಗಲೇಬೇಕು. ನಾವು ಇದೇ ಜಿಲ್ಲೆಯವರು ಇಲ್ಲೇ ಹುಟ್ಟಿ, ಇಲ್ಲೇ ಸಾಯುತ್ತೇವೆ. ಆದರೆ ಎಲ್ಲೆಲ್ಲಿಂದಲೋ ಅಧಿಕಾರ ಮಾಡಲು ಬಂದು ನಮ್ಮ ಭೂಮಿಯನ್ನು ಲಪಟಾಯಿಸಿದ್ದರೂ ಅದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ ಎಂದು ಆಕ್ರೋಶ ಹೊರ ಹಾಕಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಕೆಆರ್ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಎಲ್. ಜೀವನ್, ರಘು ನಂದನ, ಆರೋಗ್ಯ ಸ್ವಾಮಿ, ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್, ರಾಜ್ಯ ಎಸ್. ಸಿ ಎಸ್ ಟಿ ಘಟಕದ ಕಾರ್ಯದರ್ಶಿಗಳಾದ ನರಸಿಂಹರಾಜು ಸಿ ಎನ್, ಚೆನ್ನಯ್ಯ, ಅನುಸ್ವಾಮಿ ಪಕ್ಷದ ಮಹಿಳಾ ಘಟಕದ ಸದಸ್ಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.