ತುಮಕೂರು: ಪತ್ರಿಕೆ ಜನರಿಗೆ ಸುದ್ದಿ ನೀಡುತ್ತೆ, ಜಗತ್ತಿನ ಆಗು ಹೋಗುಗಳನ್ನು, ನಾನಾ ಘಟನಾವಳಿಗಳನ್ನು ತಿಳಿಸುತ್ತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕೈಗಾರಿಕೆ, ಉದ್ಯೋಗ, ಮನರಂಜನೆ ಹೀಗೆ ಎಲ್ಲಾ ಕ್ಷೇತ್ರಗಳ ವಿದ್ಯಾಮಾನಗಳನ್ನು ಓದುಗರಿಗೆ ಉಣಬಡಿಸುತ್ತೆ, ಆದರೆ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾತ್ರ ಸುಗಮವಾಗಿ ಇರಬೇಕು.
ಹೀಗೆ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಾ ತನ್ನ ವೃತ್ತಿ ಬದುಕು ಕಟ್ಟಿಕೊಂಡವರು ಟಿ.ಆರ್.ನಾಗರಾಜು, ತುಮಕೂರಿನ ಹುರುಳಿ ತೋಟದಲ್ಲಿ ವಾಸವಾಗಿರುವ ಟಿ.ಆರ್.ನಾಗರಾಜು ಅವರ ಪರಿಶ್ರಮದ ಸೇವೆ ಗುರುತಿಸಿ ಜಿಲ್ಲಾಡಳಿತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಉತ್ತಮ ಸಾಧಕನನ್ನು ಗುರುತಿಸುವ ಕಾರ್ಯ ಮಾಡಿದೆ.

ಟಿ.ಆರ್.ನಾಗರಾಜು 1995ರಿಂದ ತುಮಕೂರು ನಗರದಲ್ಲಿ ಪತ್ರಿಕಾ ವಿತರಕನಾಗಿ, ಮುದ್ರಕನಾಗಿ ಕೆಲಸ ನಿರ್ವಹಿಸುತ್ತಿದ್ದು, ತುಮಕೂರು ಜಿಲ್ಲೆಯಿಂದ ಪ್ರಕಟಣೆಗೊಳ್ಳುವ ಸ್ಥಳೀಯ ಪತ್ರಿಕೆಗಳನ್ನು ಸರ್ಕಾರಿ ಕಚೇರಿಗಳು, ಮನೆಗಳಿಗೆ ಹಾಕುವ ಕಾರ್ಯ ಮಾಡುತ್ತಿದ್ದಾರೆ, ಪತ್ರಿಕಾ ವಿತರಕನಾಗಿ ಕೆಲಸ ಪ್ರಾರಂಭಿಸಿದಾಗಿನಿಂದಲೂ ಸ್ಥಳೀಯ ಪತ್ರಿಕೆಗಳ ವಿತರಕನಾಗಿ, ಪತ್ರಿಕೆಗಳ ವಿತರಣೆಯಿಂದ ಬರುವ ಆದಾಯದಿಂದ ಬದುಕು ನಡೆಸುತ್ತಿದ್ದಾರೆ, ಪತ್ರಿಕಾ ವಿತರಕನಾಗಿ ಕೆಲಸ ಪ್ರಾರಂಭಿಸಿದ ನಂತರ ಜಿಲ್ಲಾ ಮಟ್ಟದ ಕನ್ನಡ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ, ಮಳೆ, ಚಳಿ, ಗಾಳಿ ಎನ್ನದೆ ಸರಿಯಾದ ಸಮಯಕ್ಕೆ ಮನೆ ಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಮಾಡುತ್ತಿರುವ ನಾಗರಾಜು ಅವರಿಗೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ, ಇವರಿಗೆ ಜಿಲ್ಲಾ ಪತ್ರಿಕಾ ಬಳಗ ಹಾಗೂ ಜಿಲ್ಲಾ ಪತ್ರಿಕೆಗಳ ಸಂಪಾದಕರು ಅಭಿನಂದನೆ ಸಲ್ಲಿಸಿದ್ದಾರೆ.