ಕೇಂದ್ರ ಸರ್ಕಾರದ ಕನಸಿನ ಯೋಜನೆ ಪಿ ಎಂ ಶ್ರೀ ಗೆ ಒಳಪಟ್ಟ ಪಟ್ಟಣದ ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮೂಲಭೂತ ಸಮಸ್ಯೆಗಳ ಸರಮಾಲೆಯ ದೂರು ಪೋಷಕರಿಂದ ಕೇಳಿ ಬರುತ್ತಿದೆ.
ಗುಬ್ಬಿ :- ಕಸಬಾ ಕ್ಲಸ್ಟರ್ ಗೆ ಒಳಪಡುವ ಪಟ್ಟಣದ
ಪಿ ಎಂ ಶ್ರೀ ಶಾಲೆಯಲ್ಲಿ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ, ಉತ್ತಮ ಬಿಸಿಯೂಟ ಒದಗಿಸುವಲ್ಲಿ ಆಡಳಿತ ಮಂಡಳಿಯು ವಿಫಲವಾಗಿದೆ.
ಹೌದು, 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಯು ಮೇ 29 ರಂದು ಆರಂಭವಾಗಿ ಸುಮಾರು 28 ದಿನಗಳು ಕಳೆದರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವ ಈ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದರಿಂದ ಮಧ್ಯಾಹ್ನ ಬಿಸಿಯೂಟ ಸೇವಿಸುವ ವೇಳೆಯಲ್ಲಿ ಮಕ್ಕಳ ಪರದಾಟ ಹೇಳತೀರದಾಗಿದೆ. ಈ ಸಮಸ್ಯೆಯನ್ನು ಕಂಡ ಪೋಷಕರು ಶಾಲಾ ಆಡಳಿತ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
*ಅಡುಗೆ ತಯಾರಿಗೆ ಹೇಮಾವತಿ ನೀರನ್ನು ಬಳಸುತ್ತಿರುವ ಆರೋಪ :* ಈ ಶಾಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ವಿಧಾನದ ಕೆಟ್ಟ ವ್ಯವಸ್ಥೆ ಹೇಳ ತೀರದಾಗಿದೆ. ನೇರವಾಗಿ ನಲ್ಲಿಯ ಮೂಲಕ ಬರುವ ಹೇಮಾವತಿ ನೀರನ್ನು ಅಡುಗೆಗೆ ಬಳಸುವ ಪರಿಪಾಠ ಮಾಡಿಕೊಂಡಿರುವುದರಿಂದ ಆ ನೀರಿನಲ್ಲಿ ತಯಾರು ಮಾಡಿದ ಬಿಸಿಯೂಟವನ್ನು ಮಕ್ಕಳು ಸೇವಿಸುತ್ತಿದ್ದಾರೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಯಾರು ಹೊಣೆ ಎಂಬ ಪ್ರಶ್ನೆ ..?ಮೂಡಿದೆ.
*ಬಳಕೆಗೆ ಬಾರದೆ ಮೂಲೆ ಸೇರಿದ ವಾಟರ್ ಫಿಲ್ಟರ್ ಗಳು* :
ಶಾಲೆಯಲ್ಲಿ ಈಗಾಗಲೆ ಅಡುಗೆ ಮನೆ ಹಾಗೂ ಆಡಳಿತ ಕಚೇರಿಯಲ್ಲಿ ಎರಡು ವಾಟರ್ ಫಿಲ್ಟರ್ ಗಳು ಇದ್ದು ಆಡಳಿತ ಮಂಡಳಿಯ ಬೇಜಾವಾಬ್ದಾರಿ ನಿರ್ವಹಣೆಯಿಂದ ಮೂಲೆ ಸೇರಿ ಬಳಕೆಗೆ ಬಾರದಂತ್ತಾಗಿವೆ.
*ಗಬ್ಬು ವಾಸನೆ ಬಿರುತ್ತಿರುವ ಶೌಚಾಲಯಗಳು, ಮಕ್ಕಳು ಯೂರಿನ್ ಇನ್ಫೆಕ್ಷನ್ ನಿಂದ ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ :* ಶಾಲೆಯಲ್ಲಿ ಶಾಲಾ ಆಡಳಿತಡ ಕೊರತೆಯಿಂದಾಗಿ ಶೌಚಾಲಯ ಗಳು ಗಬ್ಬು ನಾರುತ್ತಿವೆ. ಗಂಡು ಹಾಗೂ ಹೆಣ್ಣು ಮಕ್ಕಳ ಶೌಚಾಲಯಗಳು ಸ್ವಚ್ಛಗೊಳಿಸಿ ಅದೆಷ್ಟು ದಿನಗಳು ಕಳೆದಿವೆಯೋ, ಮಕ್ಕಳು ಮಧ್ಯಾಹ್ನ ಊಟ ಮಾಡುವಾಗ ಶೌಚಾಲಯಗಳಿಂದ ಬರುವ ಗಬ್ಬು ವಾಸನೆಯನ್ನು ಕುಡಿದುಕೊಂಡು ಊಟ ಮಾಡುವ ದುಸ್ಥಿತಿ ಕಂಡು ಬಂದಿದೆ. ಹಾಗೂ ಶಾಲೆಗೆ ಬರುವುದು ಸಾಮಾನ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳೆ ಹೆಚ್ಚಾಗಿದ್ದಾರೆ. ಮಕ್ಕಳು ಶೌಚಕ್ಕೆ ಹೋಗಿ ಬಂದ ಮೇಲೆ ಯೂರಿನ್ ಇನ್ಫೆಕ್ಷನ್ ನಿಂದ ಅನಾರೋಗ್ಯಕ್ಕೆ ತುತ್ತಾಗಿದರೆ ಯಾರು ಹೊಣೆ ಎಂಬತ್ತಾಗಿದೆ.
*ಬಳಕೆಗೆ ಬಾರದ ಕೈ ತೊಳೆಯುವ ನಲ್ಲಿಗಳು :* ಶಾಲೆಯಲ್ಲಿ ಕೈ ತೊಳೆಯುವ ತಲಾ ಐದು ನಲ್ಲಿಗಳಂತೆ ಮೂರು ಕಡೆ ಸಿಂಕ್ ಗಳು ಇದ್ದು ಸುಮಾರು 350 ಮಕ್ಕಳು ಏಕಕಾಲದಲ್ಲಿ ಒಂದೇ ಸ್ಥಳಕ್ಕೆ ತಟ್ಟೆ ಹಾಗೂ ಕೈ ತೊಳೆಯಲು ಹೋದಾಗ ನೀರು ಸಿಗದೇ ಪರದಾಟ ನಡೆಸುವ ಸಮಸ್ಯೆ ದಿನ ನಿತ್ಯ ಕಂಡು ಬರುತ್ತಿದೆ. ಇನ್ನೊಂದು ಸಿಂಕ್ ಬಳಕೆ ಬಾರದೇ ಕೆಲ ವಸ್ತುಗಳನ್ನು ಒಂದೆಡೆ ಹಾಕಿ ಸರಿಸೃಪಗಳ ತಾಣವಾಗಿ ಮಾರ್ಪಟ್ಟಿದೆ. ಯಾರಾದರೂ ಮಕ್ಕಳಿಗೆ ಜೀವಕ್ಕೆ ಸಮಸ್ಯೆಯಾದರೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಮೂಡುವಂತ್ತಾಗಿದೆ.
*ಅಡುಗೆ ಮೆನುವಿನಂತೆ ನೀಡುತ್ತಿಲ್ಲ ಎಂಬ ಆರೋಪ :* ವಾರದ ಆರು ದಿನದಲ್ಲಿ ಪ್ರತಿ ದಿನವೂ ಸಹ ಅಡುಗೆ ಮೆನುವಿನಂತೆ ಬಿಸಿಯೂಟ ನೀಡದೆ ಪ್ರತಿದಿನವೂ ಸಹ ಅನ್ನ ಸಾಂಬಾರ್ ನೀಡುತ್ತಿದ್ದಾರೆ ಎಂದು ಮಕ್ಕಳಲ್ಲಿ ದೂರು ಕೇಳಿ ಬಂದಿತು. ರುಚಿಯಾಗಿ ಅಡುಗೆ ಮಾಡದೆ ಕಾಟಚಾರಕ್ಕೆ ಮಾಡುತ್ತಿರುವುದು ಹಾಗೂ ಮುಖ್ಯ ಶಿಕ್ಷಕಿ ಅವರಿಂದ ಅಕ್ಷರ ದಾಸೋಹದ ಸರಿಯಾಗಿ ನಿರ್ವಹಣೆಯಾಗದೆ ಇರುವುದು ನೇರವಾಗಿ ಕಂಡು ಬಂದಿದೆ. ಹಾಲಿನ ಪೌಡರ್ ಗಳ ಪ್ಯಾಕೆಟ್ ಗಳನ್ನು ಕಟ್ಟು ಮಾಡಿ ಪಿಟ್ ಗುಂಡಿಗೆ ಹಾಕಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
*ಕುಡಿಯುವ ನೀರನ್ನು ನೀಡಿಲ್ಲ ಎಂಬ ಆರೋಪ* ಮೂಲಭೂತ ಅವಶ್ಯತೆಗಳಲ್ಲಿ ಬಹುಮುಖ್ಯವಾಗಿ ಕುಡಿಯುವ ನೀರು ಸರಬರಾಜು ಮಾಡದೆ ಇರುವುದು ಕಂಡು ಬಂದಿದೆ.
ಶಿಕ್ಷಣ ಇಲಾಖೆಯಿಂದ ಪ್ರತ್ಯೇಕವಾಗಿ ಕುಡಿಯುವ ನೀರಿಗಾಗಿಯೇ ಅನುದಾನವನ್ನು ನೀಡಲಾಗುತ್ತದೆ. ಆ ಅನುದಾನ ಎಲ್ಲಿಗೋಯಿತು. ಕಳೆದ ಇಪ್ಪತ್ತೈದು ದಿನಗಳಿಂದ ಕುಡಿಯುವ ನೀರನ್ನು ನೀಡದೆ ಮಕ್ಕಳು ಮನೆಯಿಂದ ತರುವ ನೀರನ್ನೇ ಕುಡಿಯುವಂತಹ ದುಸ್ಥಿತಿ ಕಂಡು ಬಂದಿದೆ. ದಿನ ನಿತ್ಯ ನೀರು ಸರಬರಾಜು ಮಾಡಿದ್ದೇವೆ ಎಂಬ ಸಂಜಾಯಿಸಿ ಮಾತಿಗೆ ಸಿಸಿ ಟಿವಿ ಕ್ಯಾಮೆರಾ ವೀಕ್ಷಣೆ ಮಾಡಲಿ ಎಂದು ಹೆಸರು ಹೇಳಲಿಚ್ಚಿಸದ ಸಹ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
*ಸ್ಥಳಕ್ಕೆ ಬಾರದ ಇಲಾಖೆ ಅಧಿಕಾರಿಗಳು :* ಪಟ್ಟಣದ ಹೃದಯ ಭಾಗದಲ್ಲಿ, ಇಲಾಖೆ ಅಧಿಕಾರಿಗಳ ಕೂಗಳತೆಯಲ್ಲಿರುವ ಪಿ ಎಂ ಶ್ರೀ ಶಾಲೆಯಲ್ಲಿ ಸಮಸ್ಯೆಗಳ ಬಗ್ಗೆ ದೂರು ಬಂದರು ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದನ್ನು ಕಂಡರೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮ ಗಳು, ಅನುದಾನಗಳು ನೀಡುತ್ತಿದ್ದರು ಅಧಿಕಾರಿಗಳು ಹಾಗೂ ಶಿಕ್ಷಕರ ಈ ರೀತಿಯ ದುರ್ವರ್ತನೆಯಿಂದ ಬಡ ಮಕ್ಕಳಿಗೆ ನ್ಯಾಯಯುತವಾಗಿ ಶಿಕ್ಷಣ ದೊರೆದಂತ್ತಾಗಿದೆ. ಮೇಲಿನ ಇಲಾಖೆಯ ಮೇಲಿನ ಅಧಿಕಾರಿಗಳು ಈ ಶಾಲೆಯ ಬಗ್ಗೆ ಗಮನ ಹರಿಸಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ಕ್ರಮ ವಹಿಸಲಿ ಎಂಬುದು ಪೋಷಕರ ಆಗ್ರಹವಾಗಿದೆ.
ಶಾಲೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು ಇಲಾಖೆಯ ಜಿಲ್ಲಾ ಮಟ್ಟದ ಮೇಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂಬುದು ಪೋಷಕರ ಆಗ್ರಹವಾಗಿದೆ.
ವರದಿ. ಸಂತೋಷ್ ಗುಬ್ಬಿ.