ತುಮಕೂರು : ರಾಜ್ಯದ ಕೆಲವು ಸಂರಕ್ಷಿತ ಅರಣ್ಯಗಳಲ್ಲಿ ಒಂದಾಗಿರುವ ನಮ್ಮ ಜಿಲ್ಲೆಯ ಪುರಾಣ ಪ್ರಸಿದ್ಧ ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿರುವ ಶ್ರೀರಾಮ ತಮ್ಮ ವನವಾಸದಲ್ಲಿ ಬಂದು ನೆಲಸಿದ್ದಕ್ಕೆ ಕುರುಹು ಇರುವ ಜಾಗವ, ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿರುವ ನಾಮದ ಚಿಲುಮೆಗೆ ಆಗಮಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ, ಏಕೆಂದರೆ ಇಲ್ಲಿನ ಪ್ರಾಕೃತಿಕ ಸೌಂದರ್ಯ, ಜಿಂಕೆ ವನ, ಔಷದಿ ವನ (ಸಸ್ಯ ಸಂಜೀವಿನಿ ವನ) ಒಳಗೊಂಡಿರುವ ಈ ಪ್ರದೇಶ ಅತ್ಯಂತ ರೋಮಾಂಚನಕರ ಜಾಗವಾಗಿದೆ ಎಂದರೇ ತಪ್ಪಾಗಲಾರದು.
ಇಂತಹ ರಮಣೀಯ ಪ್ರೇಕ್ಷಣಿಯ ಸ್ಥಳಕ್ಕೆ ಪಡ್ಡೆ ಹುಡುಗರು – ಹುಡುಗಿಯರು, ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಇನ್ನು ರಜಾ ದಿನಗಳು, ಭಾನುವಾರ ಇಲ್ಲಿಗೆ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಜಾಸ್ತಿ ಇರುತ್ತದೆ, ಇನ್ನುಳಿದಂತೆ ವಾರದ ದಿನಗಳು ಅಂದರೆ ರಜೆ ರಹಿತ ದಿನಗಳಲ್ಲಿ ಕೆಲ ಪ್ರೇಮಿಗಳು ಕದ್ದು ಮುಚ್ಚಿ ಇಲ್ಲಿ ಓಡಾಡಲು ಅವರಿಗೆ ನೆಚ್ಚಿನ ಪ್ರದೇಶವೆಂದರೇ ತಪ್ಪಾಗಲಾರದು.
ಆದರೆ ಇಲ್ಲಿಗೆ ಬಂದು ಹೋಗುವುದಕ್ಕೆ ಯಾರಿಗೂ ಅಭ್ಯಂತರವಿಲ್ಲ, ಇಲ್ಲಿನ ಪರಿಸರವನ್ನು ಹಾಳು ಮಾಡುತ್ತಿರುವುದಲ್ಲದೇ ಇಲ್ಲಿ ಕೆಲವರು ತಮ್ಮ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದಕ್ಕೆ ಎಷ್ಟೋ ಜನರು ಇತ್ತೀಚೆಗೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಇಲ್ಲಿ ಹಲವಾರು ದಶಕಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಿರುವ ಗಾರ್ಡ್ ಗಳು ಬೇರೂರಿದ್ದು, ಅವರ ಕೈ ಬೆಚ್ಚಗೆ ಮಾಡಿದರೆ ಸಾಕು ಏನು ಬೇಕಾದರೂ ಇಲ್ಲಿ ಸಿಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೇ ಈ ಸುದ್ಧಿ.
ಇಲ್ಲಿನ ಸಸ್ಯ ವನದಲ್ಲಿ ಅಲ್ಲಲ್ಲಿ ಚಾರಣಿಗರು, ಪ್ರವಾಸಿಗರು ಕೆಲ ಹೊತ್ತು ವಿಶ್ರಾಂತಿ ಪಡೆಯಲು ತಂಗುದಾಣದ ಮಾದರಿಯಲ್ಲಿ ನಿರ್ಮಿಸಿರುವ ಜಾಗದಲ್ಲಿ ಕೆಲವರು ತಮ್ಮ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬಳಸುತ್ತಿದ್ದಾರೆ, ಅದಕ್ಕೆ ತಾಜಾ ಉದಾಹರಣೆ ಅಲ್ಲೇ ಬಿಸಾಡಿರುವ ಕಾಂ***ಮ್ ಗಳು. ಈ ವಿಚಾರ ಅಲ್ಲಿನ ಗಾರ್ಡ್ ಗಳು ಸೇರಿದಂತೆ ಅರಣ್ಯ ರಕ್ಷಕರಿಗೆ ಗೊತ್ತಿದ್ದರೂ ಸಹ ತಮ್ಮ ಕೈ ಬೆಚ್ಚಗೆ ಆಗಿರುವ ಪ್ರಯುಕ್ತ ಯಾರೂ ಸಹ ಬಾಯಿ ಬಿಚ್ಚುತ್ತಿಲ್ಲ. ಜೊತೆಗೆ ಇವರುಗಳು ಅತ್ಯಂತ ಪ್ರಭಾವ ಶಾಲಿಗಳು ಸೇರಿದಂತೆ ಕೆಲವರು ಹಲವಾರು ವರ್ಷಗಳಿಂದ ಇದೇ ಸ್ಥಳದಲ್ಲಿ ಕಾರ್ಯ ನಿರ್ವಹಣೆ ಮಾಡಿ ಕುಬೇರರೂ ಆಗಿದ್ದಾರೆ ಎಂದರೆ ತಪ್ಪಾಗಲಾರದು.
ಯಾವುದೇ ಏನೇ ಇರಲಿ ಈ ಪ್ರದೇಶ ರಕ್ಷಿತಾರಣ್ಯ, ಜೊತೆಗೆ ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಕ್ಷೇತ್ರ, ಅಲ್ಲದೇ ಈ ಪ್ರದೇಶದಲ್ಲಿ ಅನೇಕ ಔಷದೀಯ ಸಸ್ಯಗಳು, ಮರಗಳು ಬೆಳೆದಿರುವ ಪ್ರದೇಶವಾಗಿದ್ದು, ಇದರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಈ ಸುದ್ಧಿಯನ್ನು ನೋಡಿಯಾದರೂ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವುದಲ್ಲದೇ, ಅಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವವರನ್ನು ಬದಲಾವಣೆ ಮಾಡಬೇಕಾಗಿದೆ ಎಂಬುದೇ ಹಲವಾರು ಜನರು ಹಾಗೂ ಪರಿಸರ ಪ್ರಿಯರ ಆಗ್ರಹವಾಗಿದೆ.
“ಈ ಸುದ್ಧಿ ಒಂದು ಸಾಮಾಜಿಕ ಕಳಕಳಿಯ ಸುದ್ಧಿಯಾಗಿದ್ದು, ದಯಮಾಡಿ ಪರಿಸರ ಸಂರಕ್ಷಣೆ ನಮ್ಮ ಹೊಣೆ” ಎಂದು ಭಾವಿಸಿ ಕೂಡಲೇ ಕ್ರಮ ವಹಿಸಬೇಕಾಗಿದೆ.