ತುಮಕೂರು : ಹೇಮಾವತಿ ನಾಲೆಗೆ ಲಿಂಕ್ ಕೆನಾಲ್ ನಿರ್ಮಿಸಿ ನಮ್ಮ ಚಾಲಿನ ನೀರನ್ನು ಪಕ್ಕದ ಜಿಲ್ಲೆಗೆ ತೆಗೆದುಕೊಂಡು ಹೋಗುವ ಅಪಾಯಕಾರಿ ಕೆಲಸಕ್ಕೆ ರಾಜ್ಯ ಸರ್ಕಾರ ಕ್ಕೆ ಹಾಕಿರುವುದು ಜಿಲ್ಲೆಯ ರೈತರಿಗೆ ಭಾರೀ ಅನ್ಯಾಯವನ್ನು ಖಂಡಿಸಿ ಇಂದು ತುಮಕೂರು ವೀರಶೈವ ಸಮಾಜದಿಂದ ಪತ್ರಿಕಾಗೋಷ್ಠಿಯನ್ನು ನಡೆಸಿದರು.
ವೀರಶೈವ ಸಮಾಜದ ಮುಖಂಡರಾದ ಡಾ|| ಪರಮೇಶ್ ರವರು ಮಾತನಾಡುತ್ತಾ ನಮಗೆ ಹಂಚಿಕೆಯಾಗಿರುವ 25.31ಟಿಎಂಸಿ ನೀರು ಆದೇಶದಲ್ಲಿ ಅಷ್ಟೇ ಇದ್ದು ಮಳೆಯಾದರೂ ಪೂರ್ಣಪ್ರಮಾಣದಲ್ಲಿ ನಮಗೆ ಗೊರೂರು ಜಲಾಶಯದಿಂದ ದೊರೆಯುತ್ತಿಲ್ಲ.ಪರಿಸ್ಥಿತಿ ಹೀಗಿರುವಾಗ ಕುಣಿಗಲ್ ತಾಲೂಕನ್ನು ತೋರಿಸಿ ಮಾಗಡಿ ಹಾಗೂ ರಾಮನಗರ ಭಾಗಕ್ಕೆ ನೀರನ್ನು ತೆಗೆದುಕೊಂಡು ಹೋಗುವ ಕುತಂತ್ರ ನಡೆದಿದ್ದು ತುರುವೇಕೆರೆ, ಗುಬ್ಬಿ, ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ಜನರಿಗೆ ಭಾರೀ ಅನ್ಯಾಯ ಮಾಡಲು ಮುಂದಾಗಿದೆ.
ಮಾಗಡಿ, ರಾಮನಗರ ಮತ್ತು ಕನಕಪುರದ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದ್ದಾಗ್ಯೂ ಈ ಯೋಜನೆ ಜಾರಿಗೊಳಿಸುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಹಂಚಿಕೆಯಾದ ಹೇಮಾವತಿ ನೀರು ಕುಣಿಗಲ್ಗೆ ದೊರೆಯುತ್ತಿಲ್ಲ ಎನ್ನುವುದಕ್ಕೆ ಇರುವ ವೈಜ್ಞಾನಿಕ ಕಾರಣಗಳನ್ನು ಪತ್ತೆ ಹಚ್ಚಿ ಅವರ ಪಾಲಿನ ನೀರನ್ನು ಅವರಿಗೆ ದೊರೆಯುವಂತೆ ಮಾಡಬೇಕು. ಮತ್ತೊಮ್ಮೆ ನಿಪುಣ ತಜ್ಞರನ್ನು ನೇಮಕ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆದು ರೈತರ ಸಮ್ಮುಖದಲ್ಲಿಯೇ ಬಹಿರಂಗ ಪಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಪರಮೇಶ್ವರ ರವರು ಜಿಲ್ಲೆಯ ಹಿತ ಕಾಯುವಲ್ಲಿ ವಿಫಲವಾಗಿದ್ದಾರೆ. ರೈತರ ಭಾರೀ ವಿರೋಧದ ನಡುವೆಯೂ ಈ ರೀತಿಯ ಅವರ ವರ್ತನೆ ಸರ್ಕಾರದ ಮೇಲೆ ಹಾಗೂ ಜಿಲ್ಲಾಡಳಿತದ ಮೇಲೆ ಅವರಿಗೆ ಹಿಡಿತವಿಲ್ಲ ಎನ್ನುವುದನ್ನು ತೋರಿಸುತ್ತದೆ. ಕೂಡಲೇ ಅವರು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಯೋಜನೆಯನ್ನು ಸ್ಥಗಿತಗೊಳಿಸಿ ರೈತರ ಹಿತ ಕಾಯಬೇಕು. ಈಗಾಗಲೇ ಹೋರಾಟದಲ್ಲಿ ಭಾಗಿಯಾಗಿರುವ ಅಮಾಯಕ ರೈತರು, ರೈತಪರ ಹೋರಾಟಗಾರರು ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು.
ಜಿಲ್ಲೆಯ ನೆಲ-ಜಲದ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುವ ಮಠಾಧೀಶರ ಮೇಲೂ ಪ್ರಕರಣ ದಾಖಲಿಸುವ ದೂರ್ತತನದ ಕೆಲಸ ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಹಾಗೂ ಈ ಸರ್ಕಾರ ಪ್ರಕರಣವನ್ನು ಹಿಂಪಡೆಯುವುದರ ಜೊತೆಗೆ ಪೂಜ್ಯರುಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯ ಮಾಡುತ್ತೇವೆ. ಇಲ್ಲವಾದಲ್ಲಿ ವೀರಶೈವ ಸಮಾಜಗಳು ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರುಗಳಾದ ಡಾ|| ಪರಮೇಶ್, ವಿಶ್ವಣ್ಣ, ಡಾ|| ಶ್ರೀಧರ್ (ಅಪ್ಪಿ), ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,.