ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಅತ್ತಿಮಬ್ಬೆ ವಿದ್ಯಾ ಮಂದಿರ ಶಾಲೆಯ ಅಧ್ಯಕ್ಷರಾದ ಜಲಜಾ ಜೈನ್ ತಿಳಿಸಿದರು.
ಅವರು ನಗರದ ಚಿಕ್ಕಪೇಟೆಯ ಅತ್ತಿಮಬ್ಬೆ ವಿದ್ಯಾಮಂದಿರ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪ್ರಕೃತಿಯಿಂದ ಎಲ್ಲವನ್ನು ಹೊಡೆಯುವ ಮನುಷ್ಯ ಅದರ ವಿನಾಶಕ್ಕೆ ಕೈ ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ. ಎಲ್ಲಡೆಯಲ್ಲಿಯೂ ಅರಣ್ಯ ನಾಶ, ವಿಪರೀತವಾದ ಪ್ಲಾಸ್ಟಿಕ್ ಬಳಕೆ, ಹಾಗೂ ನಗರೀಕರಣದ ಪ್ರಭಾವದಿಂದಾಗಿ ಇಂದು ಪರಿಸರ ವಿನಾಶದತ್ತ ಸಾಗಿದ್ದು ಪ್ರತಿಯೊಬ್ಬರು ಆದ್ಯ ಗಮನವಹಿಸಿ ಪರಿಸರ ಸಂರಕ್ಷಣೆಯನ್ನು ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಕೊಡುಗೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಮೇಘ ಮಾತನಾಡಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಹಾಗೂ ಅಕ್ಕ ಪಕ್ಕ ಗಿಡಗಳನ್ನು ಬೆಳೆಸಬೇಕು. ಮನುಷ್ಯನಿಗೆ ಆಮ್ಲಜನಕದ ಅವಶ್ಯಕತೆ ಇದ್ದಾಗ ಲಕ್ಷಾಂತರ ಖರ್ಚು ಮಾಡುವ ಸಂದರ್ಭ ಎದುರಾಗುತ್ತದೆ ಆದರೆ ಉಚಿತವಾಗಿ ಪ್ರಕೃತಿಯಿಂದ ಆಮ್ಲಜನಕವನ್ನು ಪಡೆಯುವ ವಿಧಾನ ಗಿಡಗಳನ್ನು ಬೆಳೆಸುವುದು ಅದನ್ನು ಮನುಷ್ಯ ಮರೆತಿದ್ದಾನೆ ಎಂದರು.
ವಿಜ್ಞಾನ ಶಿಕ್ಷಕಿ ಶ್ರೀಮತಿ ಸ್ಮಿತಾ ಮಾತನಾಡಿ ಇಂದಿನ ದಿನಮಾನದಲ್ಲಿ ಮಣ್ಣು ಅತ್ಯಂತ ಕಲುಷಿತಗೊಳ್ಳುತ್ತಿದ್ದು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ತಯಾರಾಗುವ ಪ್ಲಾಸ್ಟಿಕ್ ಬಳಕೆ. ಪ್ಲಾಸ್ಟಿಕ್ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಅದರ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ನೈಸರ್ಗಿಕವಾದ ವಸ್ತುಗಳನ್ನು ಬಳಸಬೇಕೆಂದು ಕರೆ ನೀಡಿದರು.
ಮುಖ್ಯ ಶಿಕ್ಷಕ ಮಂಜುನಾಥ್ ಮಾತನಾಡಿ ಪ್ರತಿನಿತ್ಯ ಪರಿಸರ ದಿನಾಚರಣೆಯನ್ನು ಆಚರಿಸಬೇಕು ಆಗಿದ್ದಾಗ ಮಾತ್ರ ಸ್ವಚ್ಛ ಭಾರತ ಹಸಿರು ಭಾರವಾಗಿ ಪ್ರಗತಿ ಹೊಂದುತ್ತದೆ ಇಲ್ಲವಾದಲ್ಲಿ ಈ ಆಚರಣೆಗಳು ಕೇವಲ ಆಚರಣೆಗೆ ಸೀಮಿತವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ ಕೆ ರಂಗನಾಥ್ ನಿರಂಜನ್ ರಮೇಶ್ ಶಶಿಕಲಾ ಅರುಣ ಮುಂತಾದವರು ಉಪಸ್ಥಿತರಿದ್ದರು.