ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ. ಹೆಚ್ .ಎಸ್. ವೆಂಕಟೇಶಮೂರ್ತಿ ಅವರ ಕೊಡುಗೆ ಅನನ್ಯವಾದದು ಎಂದು ಶಿಕ್ಷಕ ಎಂ.ಕೆ. ರಂಗನಾಥ್ ತಿಳಿಸಿದರು.
ಅವರು ತುಮಕೂರು ನಗರದ ಚಿಕ್ಕಪೇಟೆಯ ಅತ್ತಿಮಬ್ಬೆ ವಿದ್ಯಾಮಂದಿರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಡಾ. ಹೆಚ್ ಎಸ್. ವೆಂಕಟೇಶಮೂರ್ತಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಡಾ. ಹೆಚ್. ಎಸ್. ವಿ . ಯವರು ಕನ್ನಡ ಸಾರಸ್ವತ ಲೋಕದ ನಕ್ಷತ್ರವಾಗಿದ್ದು, ನಾಟಕ, ಭಾವಗೀತೆಗಳು, ಚಿತ್ರ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಅವರ ಸಾವು ಸಾಹಿತ್ಯ ಲೋಕಕ್ಕೆ ಬಹಳ ನಷ್ಟ ಉಂಟು ಮಾಡಿದೆ ಎಂದರು.
ಹೆಚ್.ಎಸ್.ವಿ.ಯವರ ಲೋಕದ ಕಣ್ಣಿಗೆ ರಾಧೆಯು ಕೂಡ, ಹುಚ್ಚುಕೋಡಿ ಮನಸ್ಸು, ಬಯಸಿದೆ ನಿನ್ನನು, ಇರಬೇಕು ಇರುವಂತೆ, ಮಗಳು ಜಾನಕಿ ಮುಂತಾದ ಜನಪ್ರಿಯ ಗೀತೆಗಳು ಇನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದು, ಸುಗಮ ಸಂಗೀತ ಪ್ರಪಂಚಕ್ಕೆ ಬೆಲೆಕಟ್ಟಲಾಗದಷ್ಟು ಕೊಡುಗೆಯನ್ನು ನೀಡಿದ್ದಾರೆ. ಮೈಸೂರು ಅನಂತಸ್ವಾಮಿ ರಾಜು ಅನಂತಸ್ವಾಮಿ ಸಿ ಅಶ್ವಥ್ ಮುಂತಾದ ಹಿರಿಯ ಸುಗಮ ಸಂಗೀತಗಾರರೊಂದಿಗೆ ಹಾಗೂ ಇತ್ತೀಚಿನ ಯುವ ಸುಗಮ ಸಂಗೀತಗಾರರೊಂದಿಗೆ ಸಹ ಅತ್ಯುತ್ತಮ ಸಂಬಂಧ ಹೊಂದಿದ ವೆಂಕಟೇಶಮೂರ್ತಿಯವರು ಹಿರಿಯರು ಮತ್ತು ಕಿರಿಯರ ನಡುವಿನ ಸಾಹಿತ್ಯದ ಕೊಂಡಿಯಾಗಿದ್ದರು ಎಂದರು.
ಈ ವೇಳೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದ್ದು ಎಚ್.ಎಸ್. ವೆಂಕಟೇಶಮೂರ್ತಿಯವರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡಾಂಬೆಯ ಪುತ್ರ ರತ್ನರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಇನ್ನೂ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮ ಮುಡುಗೇರಿಸಿಕೊಂಡಿದ್ದರು ಎಂದು ಬಣ್ಣಿಸಿದರು. ಶಾಲೆಯ ವಿದ್ಯಾರ್ಥಿಗಳು ಮೃತರ ಅಗಲಿಕೆಯ ನಿಮಿತ್ತ ಒಂದು ನಿಮಿಷ ಮೌನ ಆಚರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.