ಗುಬ್ಬಿ :- ಮೇಲ್ವರ್ಗದ ಸಮುದಾಯದ ಜನರು ದಲಿತ ಕುಟುಂಬಕ್ಕೆ ಸೇರಿದ ಜಮೀನಿಗೆ ಏಕಾಏಕಿ ನುಗ್ಗಿ ಉತ್ತಮವಾಗಿ ಬೆಳೆದಿದ್ದ ಸುಮಾರು ಐವತ್ತಾಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಬೇರು ಸಮೇತ ಕಿತ್ತು ಹಾಕಿರುವ ಅಮಾನವೀಯ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಕಡಬ ಹೋಬಳಿ ಮೇಳೆ ಕಲ್ಲಹಳ್ಳಿ ಮಜರೆಯ ಗಂಗಪಟ್ಟಣ್ಣ ಗ್ರಾಮದ ಸರ್ವೇ ನಂಬರ್ 157 ರಲ್ಲಿ ಎರಡು ಎಕರೆ ಜಮೀನನ್ನು ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಕಾಳಯ್ಯ s/o ಬೇಲೂರಯ್ಯ ಎಂಬುವವರಿಗೆ 2017 ರಲ್ಲಿ ಸರ್ಕಾರದಿಂದ ಮಂಜೂರು ನೀಡಲಾಗಿದೆ. ಆಗಿನಿಂದ ಇಲ್ಲಿಯವರೆಗೂ ಈ ದಲಿತ ಕುಟುಂಬವೆ ವ್ಯವಸಾಯ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದಿದೆ.
ಗ್ರಾಮದಲ್ಲಿ ಕೇವಲ ಮೂರು ಕುಟುಂಬಗಳು ಮಾತ್ರ ದಲಿತ ಕುಟುಂಬಗಳು ವಾಸವಿದ್ದು ಕಾಳಯ್ಯನ ಕುಟುಂಬಕ್ಕೆ ಮೇಲ್ವರ್ಗ (ತಿಗಳ) ಸಮುದಾಯದ ಕೆಲ ವ್ಯಕ್ತಿಗಳಾದ ಶಿವಣ್ಣ, ನೀಲಮ್ಮ, ಪಾತಯ್ಯ, ರಘು, ಗಂಗಾ, ಸಿದ್ದಲಿಂಗಮ್ಮ, ತಮ್ಮಯ್ಯ, ರೇಣುಕಮ್ಮ, ಚಂದ್ರಯ್ಯ, ಈ ಜಮೀನು ನಮಗೆ ಸೇರಬೇಕು ಎಂದು ಕಾಳಯ್ಯ ಮಕ್ಕಳಾದ ದೇವರಾಜು, ಭದ್ರಯ್ಯ ಹಾಗೂ ಕುಟುಂಬಕ್ಕೆ ದಿನ ನಿತ್ಯ ದೌರ್ಜನ್ಯ ನಡೆಸಿ, ದೈಹಿಕವಾಗಿ ಹಲ್ಲೆ ನಡೆಸಿರುತ್ತಾರೆ. ಗ್ರಾಮದ ರಸ್ತೆಯಲ್ಲಿ ಓಡಾಡುವುದಕ್ಕೆ ಬಿಡದೆ. ಪ್ರತಿದಿನ ಜಾತಿನಿಂದನೆ ಮಾಡುತ್ತಾ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದ ದಲಿತ ಕುಟುಂಬದ ಮಹಿಳೆ ತಾಯಮ್ಮ ಮಾಧ್ಯಮದ ಮುಂದೆ ಕಣ್ಣಿರುಡುತ್ತಾರೆ.
ಜಮೀನಿನ ಮಾಲೀಕ ದೇವರಾಜ್ ಮಾತನಾಡಿ ಸರ್ಕಾರದಿಂದ ನಮಗೆ 2017 ನೇ ಇಸವಿಯಲ್ಲಿ ಎರಡು ಎಕರೆ ಜಮೀನು ಮಂಜೂರಾಗಿದ್ದು ಕಾಲಕಾಲಕ್ಕೆ ತಕ್ಕಂತೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿಕೊಂಡು ಅನುಭೋಗದಲ್ಲಿ ಇದ್ದೇವೆ ನಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಹೋದಾಗ ಗ್ರಾಮದ ತಿಗಳ ಸಮುದಾಯದ ಕೆಲ ಕಿಡಿಗೇಡಿಗಳು ನೀನು ಎಸ್ ಸಿ ಸಮುದಾಯಕ್ಕೆ ಸೇರಿದೆಯಾ ನೀನು ಇಲ್ಲಿ ಮನೆ ಕಟ್ಟಿಕೊಂಡರೆ ನಾವು ಎಸ್ ಸಿ ಸಮುದಾಯಕ್ಕೆ ಸೇರಿದವರಾಗುತ್ತೇವೆ ಎಂದು ನಮಗೆ ಇಲ್ಲಿ ವಾಸಿಸಲು ಅವಕಾಶ ನೀಡುತ್ತಿಲ್ಲ. ಜಮೀನಿನಲ್ಲಿ ಕಟ್ಟಿರುವ ಮನೆಗೆ ನಾವು ವಾಸಮಾಡಲು ಬಿಡುತ್ತಿಲ್ಲ. ಕಟ್ಟಿರುವ ಮನೆವು ಸಹ ಹಾಗೆಯೇ ಪಾಳು ಬಿದ್ದಿದೆ. ಶಿವಣ್ಣ, ಪಾತಯ್ಯ, ರಘುನಾಥ್, ಗಂಗಯ್ಯ ಎಂಬುವರು ನಮಗೆ ಜೀವ ಬೆದರಿಕೆ ಸಹ ಹಾಕುತ್ತಿದ್ದು ಇವರಿಂದ ನಮಗೆ ರಕ್ಷಣೆ ಬೇಕಾಗಿದೆ. ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಸಹ ಪೊಲೀಸ್ ಠಾಣೆಗೆ ಬಂದು ಈ ಕುಟುಂಬದ ಸಹವಾಸಕ್ಕೆ ಹೋಗುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟು ಮತ್ತೆ ಗ್ರಾಮದಲ್ಲಿ ಇದೇ ರೀತಿಯ ಸಮಸ್ಯೆಯನ್ನು ನಮಗೆ ನೀಡುತ್ತಿದ್ದಾರೆ. ಪ್ರತಿದಿನ ಕೀಳಾಗಿ ನಮ್ಮನ್ನು ಕಂಡು ನೆಮ್ಮದಿಯಿಂದ ಜೀವನ ಸಾಗಿಸುವುದಕ್ಕೆ ಬಿಡುತ್ತಿಲ್ಲ. ಈ ಗ್ರಾಮದಲ್ಲಿರುವ ತಿಗಳ ಸಮುದಾಯದ ಕೆಲ ವ್ಯಕ್ತಿಗಳಿಂದ ದಬ್ಬಾಳಿಕೆ ದೌರ್ಜನ್ಯದಿಂದಾಗಿ ನಾವು ಗ್ರಾಮವನ್ನು ತೊರೆಯುವಂತಹ ಸ್ಥಿತಿ ಬಂದಿದೆ. ನಮ್ಮ ಜೀವ ರಕ್ಷಣೆಗೆ ಜಿಲ್ಲಾಧಿಕಾರಿಯವರೇ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನಮಗೆ ನ್ಯಾಯ ಕೊಡಿಸಬೇಕಿದೆ. ಈ ದಬ್ಬಾಳಿಕೆ ಕೋರರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕಿದೆ ಕೇಳಿಕೊಂಡರು.
ಸ್ಥಳದಲ್ಲಿ ದಲಿತ ಮುಖಂಡರಾದ ಕಡಬ ಶಂಕರ್, ನಟರಾಜು, ಕಲ್ಲೂರ್ ರವಿಕುಮಾರ್, ಮಹೇಶ್, ಈಶ್ವರಯ್ಯ, ಕಲ್ಲೇಶ್, ಸೇರಿದಂತೆ ಗ್ರಾಮಸ್ಥರು ಇದ್ದರು.
(ವರದಿ:-ಸಂತೋಷ್ ಗುಬ್ಬಿ)