ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ – ಮಹಾಶಿವರಾತ್ರಿ ನಿಮಿತ್ತ ವಿಶೇಷ ಲೇಖನ !

ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದು

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ. ನಂದಿಯ ಕೊಂಬುಗಳಿಂದ ದರ್ಶನವನ್ನು ಪಡೆದುಕೊಳ್ಳದೇ ನೇರವಾಗಿ ಶಿವನ ದರ್ಶನವನ್ನು ಪಡೆದು ಕೊಂಡರೆ ತೇಜಲಹರಿಗಳ ಆಘಾತದಿಂದ ಶರೀರದಲ್ಲಿ ಉಷ್ಣತೆ ನಿರ್ಮಾಣವಾಗುವುದು, ತಲೆ ಭಾರವಾಗುವುದು, ಶರೀರ ಅಕಸ್ಮಾತ್ತಾಗಿ ಕಂಪಿಸುವುದು ಮುಂತಾದ ತೊಂದರೆಗಳಾಗಬಹುದು.

 

 

 

ಶೃಂಗದರ್ಶನದ ಮಹತ್ವವೇನು ?

‘ಶೃಂಗದರ್ಶನ’ ಎಂದರೆ ನಂದಿಯ ಕೊಂಬುಗಳ ಮೂಲಕ ಶಿವಲಿಂಗವನ್ನು ನೋಡುವುದು. ನಂದಿಯ ಬಲಬದಿಗೆ ಕುಳಿತುಕೊಂಡು ಅಥವಾ ನಿಂತುಕೊಂಡು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು. ಬಲಗೈಯ ತರ್ಜನಿ (ಹೆಬ್ಬೆರಳಿನ ಸಮೀಪದ ಬೆರಳು) ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು. ಎರಡು ಕೊಂಬುಗಳು ಮತ್ತು ಅದರ ಮೇಲಿರಿಸಿದ ಎರಡು ಬೆರಳುಗಳ ನಡುವಿನ ಖಾಲಿ ಜಾಗದಿಂದ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳಬೇಕು.

 

 

 

ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.

ಶಿವಲಿಂಗದಿಂದ ಬರುವ ಶಕ್ತಿಶಾಲಿ ಸಾತ್ತ್ವಿಕ ಲಹರಿಗಳು ಮೊದಲು ನಂದಿಯ ಕಡೆಗೆ ಆಕರ್ಷಿತವಾಗಿ ನಂತರ ನಂದಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತಿರುತ್ತವೆ. ನಂದಿಯ ವೈಶಿಷ್ಟ್ಯವೇನೆಂದರೆ ನಂದಿಯಿಂದ ಈ ಲಹರಿಗಳು ಆವಶ್ಯಕತೆಗನುಸಾರವಾಗಿಯೇ ಪ್ರಕ್ಷೇಪಿತವಾಗುತ್ತಿರುತ್ತವೆ. ಇದರಿಂದ ಶಿವಲಿಂಗದ ದರ್ಶನವನ್ನು ಪಡೆಯುವವರಿಗೆ ಲಹರಿಗಳು ಶಿವನಿಂದ ನೇರವಾಗಿ ಸಿಗುವುದಿಲ್ಲ; ಇದರಿಂದ ಅವರಿಗೆ ಶಿವನಿಂದ ಬರುವ ಶಕ್ತಿ ಶಾಲಿ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಲ್ಲಿ ಗಮನದಲ್ಲಿಡಬೇಕಾದ ಮಹತ್ವದ ಸಂಗತಿಯೇನೆಂದರೆ ಶಿವನಿಂದ ಬರುವ ಲಹರಿಗಳು ಸಾತ್ತ್ವಿಕವೇ ಆಗಿದ್ದರೂ ಸಾಮಾನ್ಯ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟವು ಹೆಚ್ಚಿಗೆ ಇಲ್ಲದ ಕಾರಣ ಆ ಸಾತ್ತ್ವಿಕ ಲಹರಿಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಅವರಲ್ಲಿರುವುದಿಲ್ಲ. ಆದುದರಿಂದ ಈ ಲಹರಿಗಳಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸಾಮಾನ್ಯ ವ್ಯಕ್ತಿಗಳು ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತು ಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಗೆ ನಿಂತು ಕೊಳ್ಳಬೇಕು. (ಈ ತತ್ತ್ವಕ್ಕನುಸಾರ ಶ್ರೀವಿಷ್ಣು ಇತ್ಯಾದಿ ದೇವತೆಗಳ ದೇವಸ್ಥಾನಗಳಲ್ಲಿ ದೇವತೆಯ ಮೂರ್ತಿ ಮತ್ತು ಅದರ ಎದುರಿನಲ್ಲಿರುವ ಆಮೆಯ ಪ್ರತಿಮೆಯ ನಡುವೆ ನಿಂತುಕೊಂಡು/ಕುಳಿತುಕೊಂಡು ದರ್ಶನ ಪಡೆಯಬಾರದು. ದರ್ಶನ ಪಡೆಯಲು ಬಯಸುವವರು ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತುಕೊಂಡು ದರ್ಶನ ಪಡೆಯಬೇಕು.)

ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’

 

 

 

ಸಂಗ್ರಹ :

ಶ್ರೀ. ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)

Leave a Reply

Your email address will not be published. Required fields are marked *

error: Content is protected !!